Wednesday 21 March 2012

ಬನ್ನಿ ಎಲ್ಲರೂ ಇಲ್ಲಿ .. ಇದು "ಕನ್ನಡಮಲ್ಲಿ"


ಊರೂರು ಸುತ್ತಿ ಹೊರದೇಶದಲ್ಲಿ .. ಭಾರಿ ಜೋರು ನಮ್ಮ "ಕನ್ನಡಮಲ್ಲಿ"

ವಿದ್ಯಾರ್ಥಿ ಜೀವನದೊಳು ಮೂಡಿತು ಹೊಸತನ 
ನಗೆ ನಾಟಕಗಳ ಸಮಾರಂಭ , ಚುಟುಕು ಹನಿವನ 
ದೇಶ ವಿದೇಶದಲ್ಲೂ ಹಚ್ಚಿದರು ಕನ್ನಡದ ದೀಪ
"ಕನ್ನಡಮಲ್ಲಿ" ಎಲ್ಲರಿಗೂ ಸ್ಪೂರ್ತಿಯ ಪ್ರತಿರೂಪ

ಊರೂರು ಸುತ್ತಿ ಹೊರದೇಶದಲ್ಲಿ .. ಭಾರಿ ಜೋರು ನಮ್ಮ "ಕನ್ನಡಮಲ್ಲಿ"

ಸಾಧನೆಯ ಹಾದಿ ನೋಡ ಬನ್ನಿ ಈ ತಾಣದೊಳು
"ಕನ್ನಡಮಲ್ಲಿ" ಬೆಳೆದು ಬಂದ ವಿಶಿಷ್ಟ ವಿಸ್ಮಯಗಳು
ಅರಿಯದವರಿಗಾಶ್ಚರ್ಯ , ಅಪ್ತರಿಗಿವು ಸಿಹಿ ನೆನಪುಗಳು
"ಕನ್ನಡಮಲ್ಲಿ" ಪರಿಚಯ , ಪತ್ನಿಯ 'ಮಧು'ರ ಮಾತುಗಳು

ಊರೂರು ಸುತ್ತಿ ಹೊರದೇಶದಲ್ಲಿ .. ಭಾರಿ ಜೋರು ನಮ್ಮ "ಕನ್ನಡಮಲ್ಲಿ"

ಅಮೇರಿಕಾದಲ್ಲಿ ಯಮರಾಜ , ಸಂಸಾರದಲ್ಲಿ ಶಿವರಾತ್ರಿ
ಅಮೇರಿಕಾದಲ್ಲಿ ಬಸವಣ್ಣ , ದಂಡಪಿಂಡಗಳು , ಹಾಸ್ಯ
ಪ್ರಹಸನ ಅನಾವರಣವಾಯಿತು ಚಿಕಾಗೋ , ಬಾಸ್ಟನ್
ಸೌತ್ ಕರೋಲಿನ , ನ್ಯೂಯಾರ್ಕ್ , ಫ್ಲೋರಿಡಗಳಲ್ಲಿ ....

ಊರೂರು ಸುತ್ತಿ ಹೊರದೇಶದಲ್ಲಿ .. ಭಾರಿ ಜೋರು ನಮ್ಮ "ಕನ್ನಡಮಲ್ಲಿ"

ಹಲವಾರು ಪ್ರದೇಶ , ಅನೇಕ ಪ್ರದರ್ಶನ , ಜನ ಮೆಚ್ಚಿದರು
ಅನಿಮೇಶನ್ ಅದ್ಬುತಗಳ ಸೃಷ್ಟಿ , ಹೊಸ ಸಾಹಿತ್ಯ ರಚನೆ
ಸಂಗೀತ ಸಂಯೋಜನೆ , ಸೇರಿ ಎಲ್ಲವೂ ಜನಪ್ರಿಯವಾದವು
ಇಂಟರ್`ನೆಟ್ ಪರಮಾತ್ಮ , ಫೇಸ್`ಬುಕ್ ಇಷ್ಟೇನೇ ....

ಊರೂರು ಸುತ್ತಿ ಹೊರದೇಶದಲ್ಲಿ .. ಭಾರಿ ಜೋರು ನಮ್ಮ "ಕನ್ನಡಮಲ್ಲಿ"

ಹಾಸ್ಯ ಹಂಚುತ ಸುದ್ದಿ ಸಾರುವ ಹೊಸ ರೂಪದೊಳು
 "ಶ್ರೀ ಯಡಿಯೂರಪ್ಪ ಮಹಾತ್ಮೆ" , "ಜೈಲಿನಲ್ಲಿ ಪರಮಾತ್ಮ"
"ಸೋನಿಯಾ ದೊಂಬರಾಟ" , "ವಿಧಾನ ಸೌದದ ಡರ್ಟಿ ಪಿಕ್ಚರ್"
"ಮುಂಗಾರು ಮಳೆ ಸಿದ್ರಾಮಣ್ಣ" , "ನೀವು ಸುಪರೋ ಅಣ್ಣಾ"

ಊರೂರು ಸುತ್ತಿ ಹೊರದೇಶದಲ್ಲಿ .. ಭಾರಿ ಜೋರು ನಮ್ಮ "ಕನ್ನಡಮಲ್ಲಿ"

ಕೇಳ್ರಪ್ಪೋ ಕೇಳ್ರಿ ಕರ್ನಾಟಕದ ರಾಜಕೀಯ ಸ್ಥಿತಿಯ ಹಾಸ್ಯ ಕವನ
ಸಿಹಿ ತಿನಿಸು ಊಟಗಳ ಮಾತುಗಳು "ಸಂಕ್ರಾಂತಿ ಶುಭಾಶಯಗಳು"
ಎಲ್ಲವೂ ಮನಸೆಳೆಯುವ ಮಜವಾದ ಹಾಸ್ಯದ ಚಿತ್ರ ವಿಚಿತ್ರ ಅವತಾರ
ಸುದ್ದಿ ವಾಹಿನಿ , ಟೀವಿ ಮಾಧ್ಯಮಗಳಲ್ಲೂ ಆಗುವುದು ದೃಶ್ಯಗಳ ಪ್ರಸಾರ

ಊರೂರು ಸುತ್ತಿ ಹೊರದೇಶದಲ್ಲಿ .. ಭಾರಿ ಜೋರು ನಮ್ಮ "ಕನ್ನಡಮಲ್ಲಿ"

ನಟ , ನಿರ್ದೇಶಕ , ಸಾಹಿತಿ , ಗಾಯಕ , ನೃತ್ಯಗಾರ , ಸಕಲ ಕಲಾ ಪ್ರವೀಣರು
ಮ್ಯಾನ್`ಹ್ಯಾಟನ್ ನಗರದ ಹಣಕಾಸಿನ ಕಂಪೆನಿಯೊಂದರ ನಿರ್ದೇಶಕರು
ದಾವಣಗೆರೆಯಲ್ಲಿ ಓದಿ ಬೆಳೆದವರು .. ಗಣಕಯಂತ್ರ ಅಭಿಯಂತರರು
ನ್ಯೂಯಾರ್ಕ ಅಲ್ಲಿ ನೆಲೆಸಿರುವ ಕನ್ನಡಿಗರು .. ನಮ್ಮೂರಿನವರು ಇವರು

ಊರೂರು ಸುತ್ತಿ ಹೊರದೇಶದಲ್ಲಿ .. ಭಾರಿ ಜೋರು ನಮ್ಮ "ಕನ್ನಡಮಲ್ಲಿ"

"ಕನ್ನಡಮಲ್ಲಿ" ಪರಿಚಯದ ಕವನ , ಸರಳ ಪದಗಳ ಸಮ್ಮಿಲನ
ಕನ್ನಡಿಗರ ಸುಂದರ ತಾಣ , ಈ ಕವನ ವಿಭಿನ್ನ ಆಮಂತ್ರಣ
ಬನ್ನಿ ಎಲ್ಲರೂ ಇಲ್ಲಿ .. ಇದು "ಕನ್ನಡಮಲ್ಲಿ"
ಬನ್ನಿ ಎಲ್ಲರೂ ಇಲ್ಲಿ .. ಇದು "ಕನ್ನಡಮಲ್ಲಿ"

ಊರೂರು ಸುತ್ತಿ ಹೊರದೇಶದಲ್ಲಿ .. ಭಾರಿ ಜೋರು ನಮ್ಮ "ಕನ್ನಡಮಲ್ಲಿ"

|| ಪ್ರಶಾಂತ್ ಖಟಾವಕರ್ ||


click here to visit (ತಾಣಕ್ಕೆ ಭೇಟಿ ಕೊಡಲು) >>>>>  "ಕನ್ನಡಮಲ್ಲಿ" (kannadamalli)



Sunday 18 March 2012

ಇದು ನನ್ನ ಕವನ (ಒಂದು ಪ್ರಶ್ನೆ)



ಇದು ನನ್ನ ಕವನ (ಒಂದು ಪ್ರಶ್ನೆ)
******************************

ನಾ ಮಲಗುವ ಮುನ್ನ
ನೋಡಿದೆ ಕನ್ನಡಿಯನ್ನ

ನನ್ನನ್ನೇ ನಾನು ನೋಡಿ
ಬಂದೆ ಬರೆಯಲು ಓಡೋಡಿ
ಕಟ್ಟಲು ಪದಗಳ ಉಗಿಬಂಡಿ
ಏರಲು ಕಲ್ಪನೆಯ ಎತ್ತಿನ ಗಾಡಿ

ನಾ ಮಲಗುವ ಮುನ್ನ
ನೋಡಿದೆ ಕನ್ನಡಿಯನ್ನ

ಮೊದಲ ನೋಟದ ಮೋಡಿ
ನೆನಪುಗಳ ಜೊತೆಗೂಡಿ
ಬಂದವು ಹಾಡಿ ಕುಣಿದಾಡಿ
ಭಾವನೆಗಳಿಗೆ ಬೆಲೆ ನೀಡಿ

ನಾ ಮಲಗುವ ಮುನ್ನ
ನೋಡಿದೆ ಕನ್ನಡಿಯನ್ನ

ನನ್ನ ಚೆಲುವ ಹೊಗಳಲು
ಸಾಲದು ಪದಗಳ ಸಾಲು
ಕನಸಿನ ರಾಜ ಮಾಮೂಲು
ಬೇರೇನೂ ಸಿಕ್ಕಿಲ್ಲ ಬರೆಯಲು

ನಾ ಮಲಗುವ ಮುನ್ನ
ನೋಡಿದೆ ಕನ್ನಡಿಯನ್ನ

ಗೆಳಯ ಗೆಳತಿಯರ ಮಾತು
ಆಂಗ್ಲ ಪದದ ವರ್ಣನೆ ಇತ್ತು
ಕನ್ನಡ ಪದ ಓದುವ ಆಸೆಯಿತ್ತು
       ಕನ್ನಡ ಬರೆಯಲು ಯಾರಿಗೆ ಗೊತ್ತು ????

ನಾ ಮಲಗುವ ಮುನ್ನ
       ನೋಡಿದೆ ಕನ್ನಡಿಯನ್ನ .. :)

     || ಪ್ರಶಾಂತ್ ಖಟಾವಕರ್ ||

Wednesday 14 March 2012

ಆತ್ಮ ಬಂಧನ


ಆತ್ಮ ಬಂಧನ
******** ********
ಹಾಳೆ ಪೂರ ಖಾಲಿ ಇತ್ತು 
ಬರೆಯಲು ಕವನ ನೆನಪಲ್ಲಿತ್ತು

ಕೈಯಲ್ಲಿ ಕೆಂಪು ಬಣ್ಣದ ಕುಂಚ
ಪ್ರೀತಿಯ ಕಲ್ಪನೆಯ ಚಿತ್ರಿಸಲು
ಪದಗಳಿಗೆ ಚಿತ್ರ ರೂಪ ನೀಡಲು
ಎದುರಾಯಿತು ಒಂದು ಸವಾಲು
ಆರಂಭ ಹೇಗೆಂಬ ಹೊಸ ದಿಗಿಲು

ಹಾಳೆ ಪೂರ ಖಾಲಿ ಇತ್ತು 
ಬರೆಯಲು ಕವನ ನೆನಪಲ್ಲಿತ್ತು

ಮಾವನ ಮಗಳ ಮುದ್ದಿನ ಗೊಂಬೆ
ಮೇಜಿನ ಮೇಲೆ ಕೂತು ಕರೆದಂತೆ
ಕರಾಳ ರಾತ್ರಿಯಲ್ಲಿ ವಿಚಿತ್ರ ಚಿಂತೆ
ಗೊಂಬೆಯ ಕಣ್ಣು ಕೆಂಪು ಕೆಂಡದಂತೆ
ಆತ್ಮಬಂಧನ ಆ ದಿನಗಳ ನೆನಪಿನಂತೆ

ಹಾಳೆ ಪೂರ ಖಾಲಿ ಇತ್ತು 
ಬರೆಯಲು ಕವನ ನೆನಪಲ್ಲಿತ್ತು

ಕೂತೂಹಲ ಕಲ್ಪನೆ ನಾನೇ ಶಶಿಕುಮಾರ
ಜಯಪ್ರದ ಕನಸು ಕಾಣುವ ಕನಸುಗಾರ
ಪದಗಳ ಸೇರಿಸುವಲ್ಲಿ ಗೊಂಬೆಯ ಗೀತೆ
     ಕೂಗಿತ್ತು ನನ್ನನ್ನು ಬಾ..!! ಇದು ಗೊತ್ತೇ.. ?
     ಅಯ್ಯೋ ದೇವ ಕನಸೋ ನನಸೋ ನಾ ಸತ್ತೆ..

ಹಾಳೆ ಪೂರ ಖಾಲಿ ಇತ್ತು 
ಬರೆಯಲು ಕವನ ನೆನಪಲ್ಲಿತ್ತು

ಕೊನೆಗೂ ಎದ್ದೆ ನಾನು ನಿದ್ದೆಯಿಂದ
ಕನಸಿನ ಕಥೆಯ ಕವನವಾಗಿ ಕಟ್ಟಲು
ಭಯದಲ್ಲೂ ಬರೆಯುವ ಆಸೆ ಹುಟ್ಟಲು
ಕಥೆಗಾರ ನಾನು ಬರೆಯುವೆ ಕನಸಲ್ಲೂ
     ವಿಸ್ಮಯ ರಹಸ್ಯ ಪ್ರತಿ ಸಾಲು ಸಾಲಿನಲ್ಲೂ.. :)

ಹಾಳೆ ಪೂರ ಖಾಲಿ ಇತ್ತು 
ಬರೆಯಲು ಕವನ ನೆನಪಲ್ಲಿತ್ತು
ಕನಸಲ್ಲಿ ಮಾತ್ರ ಹೀಗೆ ಇತ್ತು
ನೀವ್ಯಾರು ನಂಬೋದಿಲ್ಲ ಗೊತ್ತು
     ಆದರೂ ಈ ಕವನ ಬೇಕೇ ಬೇಕಿತ್ತು .. :)

|| ಪ್ರಶಾಂತ್ ಖಟಾವಕರ್ ||

Tuesday 13 March 2012

ಜೀವನ ನಾಟಕರಂಗ


ಜೀವನ ನಾಟಕರಂಗ
*****************


ಜೀವನ ನಾಟಕರಂಗ , ನಾನೊಬ್ಬ ಪಾತ್ರಧಾರಿ
ಆ ದಿನಗಳ ನೆನಪು , ಬಾಳೊಂದು ಚದುರಂಗದಾಟ

ಮುಖಕ್ಕೆ ಬಣ್ಣ ಹಚ್ಚದೆಯೇ ಮೊದಲ ಪಾತ್ರ
ನಾನಲ್ಲಿ ಶ್ರೀ ಗಣೇಶ ಮುಖವಾಡ ಧರಿಸಿ
ಕೈಯಲ್ಲಿ ಹಿಡಿದು ಕೋವಿ ವೀರ ಪ್ರತಾಪ
ನಾನಲ್ಲಿ ವೀರ ಸೈನಿಕ ಮತ್ತೊಂದು ಪಾತ್ರ

ಗಡ್ಡೆ ಗೆಣಸು ತಿನ್ನುತ ಮರೆದೆಲೆಗಳೇ ಉಡುಪು
ಕಾಡು ಮನುಷ್ಯ ಜೀವಕ್ಕೆ ಜೀವ ಬಲಿ ನಾಟಕವಿಲ್ಲಿ
ನೇಗಿಲ ಹೊತ್ತು ಹೊಲದಲ್ಲಿ ಬದುಕು ಸಣ್ಣ ರೈತ
ಅಸ್ತಿ ಜಗಳ ಸತ್ತವನಿಗೆ ಮರುಜನ್ಮ ಶ್ರೀಮಂತ ದ್ವಿಪಾತ್ರ

ಕರೋಡ್`ಪತಿ ಕಥೆಯಲ್ಲಿ ಮುಖ್ಯಪಾತ್ರ ನಾನೇ ನಾಯಕ
ಎಲ್ಲವೂ ನಾಟಕ ಕೆಲವು ಅತಿಥಿ ಪಾತ್ರ ಹಲವು ಹಾಸ್ಯ ಪಾತ್ರ
ಇತಿಹಾಸದಲ್ಲಿ ರಾಜರು ಹೋರಾಟಗಾರರು ಮಹಾಪುರುಷರು
ಚಂದ್ರಶೇಖರ ಅಜಾದ್ ದೇಶಪ್ರೇಮ ಸ್ಕೌಟ್  ಕಾರ್ಯಕ್ರಮದಲ್ಲಿ 

ಹಿಂದೂ ಮುಸ್ಲಿಂ ಭಾಯ್ ಭಾಯ್ ನಾನಲ್ಲಿ ಅಕ್ಬರ್ ಖಾನ್
ಗೆಳಯನ ತೊಂದರೆ ನಾನೇ ತಕ್ಷಣಕ್ಕೆ ಪೀಟರ್ ಫ್ರಂ ಪ್ಯಾರಿಸ್
ರಾಜ ಮಹಾರಾಜ ಎಂದ ಕ್ಷಣದಲ್ಲೇ ಗಂಭೀರತೆ ಸ್ವಭಾವ
ಹೈದರ್ ಅಲಿ , ಮದಕರಿನಾಯಕ , ನಾನೇ ಭೀಮ , ರಾವಣ

ಶ್ರೀ ಕೃಷ್ಣದೇವರಾಯ , ಸಂಗೊಳ್ಳಿ ರಾಯಣ್ಣ , 
ಎರಡು ನಿಮಿಷದ ಅರ್ಜುನ , ಇನ್ನೂ ಉಂಟು 
ಜೀವನ ನಾಟಕರಂಗದಲ್ಲಿ ಪರಿಪರಿಯ ಪಾತ್ರಗಳು
ಎಲ್ಲವು ಕೇವಲ ಆ ದಿನಗಳ ನೆನಪಿನ ಕ್ಷಣಗಳು

ಅಂದಿತ್ತು ಸುಂದರ ಕನಸುಗಳಿಗೆ ಪ್ರೋತ್ಸಾಹ
ಇಂದೆಲ್ಲಾ ಆ ಕನಸುಗಳು ಸ್ವಾರ್ಥಕ್ಕೆ ಬಲಿಯಾಗಿ
ಜೀವನ ಬದಲಾಗಿ ಬರೆಯಲು ಬಗೆಬಗೆಯ ಕಲ್ಪನೆ
ಎಲ್ಲದಕ್ಕೂ ಕಾರಣ ಬಾಳೊಂದು ಚದುರಂಗದಾಟ

ಜೀವನ ನಾಟಕರಂಗ , ನಾನೊಬ್ಬ ಪಾತ್ರಧಾರಿ
ಆ ದಿನಗಳ ನೆನಪು , ಬಾಳೊಂದು ಚದುರಂಗದಾಟ



|| ಪ್ರಶಾಂತ್ ಖಟಾವಕರ್ ||


ನೆನಪಿನ ಕವನ , ಸ್ಪೂರ್ತಿಯ ಕಾರಣ , ಇದೂ ನಾನೇ
ಪಾತ್ರ : ಶ್ರೀ ಕೃಷ್ಣದೇವರಾಯ ,  ನಾಟಕ : ವಿಜಯನಗರ ಸಾಮ್ರಾಜ್ಯ

Tuesday 6 March 2012

ಪ್ರತಿನಿತ್ಯ



ಪ್ರತಿನಿತ್ಯ
*********

 ಪ್ರತಿ ದಿನವೂ ಪ್ರತಿ ಕ್ಷಣವೂ  ಕನ್ನಡವೇ ಆಗಿರಲಿ ಪ್ರತಿನಿತ್ಯ  

ಕನ್ನಡವೇ ಸತ್ಯ
ಬರೆಯುತ ಬಾಳು ನೀ
ಸುವರ್ಣ ಅಕ್ಷರಗಳಲ್ಲಿ
ಕನ್ನಡವ ಪ್ರತಿನಿತ್ಯ

 ಪ್ರತಿ ದಿನವೂ ಪ್ರತಿ ಕ್ಷಣವೂ  ಕನ್ನಡವೇ ಆಗಿರಲಿ ಪ್ರತಿನಿತ್ಯ  

ಓದಲು , ನೋಡಲು 
ಕೇಳಲು , ಕಲಿಯಲು
ತಿಳಿಯಲು , ಬರೆಯಲು
ಸುಂದರ ಈ ಕನ್ನಡ ಸಾಹಿತ್ಯ

 ಪ್ರತಿ ದಿನವೂ ಪ್ರತಿ ಕ್ಷಣವೂ  ಕನ್ನಡವೇ ಆಗಿರಲಿ ಪ್ರತಿನಿತ್ಯ 

ಅರಿಯಬೇಕು ಓ ಕನ್ನಡಿಗ ನೀ
ಮಾತೃ ಭಾಷೆಯ ಉಳಿಸಿ 
ಬೆಳೆಸುವ ಭವಿಷ್ಯದ ಅಗತ್ಯ
ನುಡಿ ನೀ ಕನ್ನಡವೇ ಸತ್ಯ

 ಪ್ರತಿ ದಿನವೂ ಪ್ರತಿ ಕ್ಷಣವೂ  ಕನ್ನಡವೇ ಆಗಿರಲಿ ಪ್ರತಿನಿತ್ಯ 

|| ಪ್ರಶಾಂತ್ ಖಟಾವಕರ್ ||

Saturday 3 March 2012

ಕುಡುಕನ ಶಾಯರಿ.. :)


ಕುಡುಕನ ಶಾಯರಿ.. :)
******************** 

ಇಂದು ನನ್ನವಳು ಕನಸಲ್ಲಿ ಬರುವಳೆಂದು 
ಅವಳಿಗಾಗಿ ನಾ ತಂದಿರುವೆ ಹಣ್ಣುಗಳನ್ನು 
ವಾಹ್ ವಾ.. !! ವಾಹ್ ವಾ.. !! 


ಇಂದು ನನ್ನವಳು ಕನಸಲ್ಲಿ ಬರುವಳೆಂದು 
ಅವಳಿಗಾಗಿ ನಾ ತಂದಿರುವೆ ಹೆಣ್ಣುಗಳನ್ನು
ಏಯ್ .. ಕುಡುಕ ಸರಿಯಾಗಿ ಹೇಳೋ.. 


ಹಣ್ಣುಗಳನ್ನು .. 

ರಾತ್ರಿ ಎಲ್ಲಾ ನಿದ್ದೆ ಮಾಡದೆ.. ನಾನೇ ತಿಂದೆ 
ಬಾಟಲಿ ಎಲ್ಲಾ ಖಾಲಿ ಆಗಿದೆ.. ನಾನೇ ಕುಡಿದೆ 
ನಿದ್ದೆಯೂ ಇಲ್ಲ.. ಹಣ್ಣುಗಳು ಖಾಲಿ.. 
ಕನಸೂ ಖಾಲಿ .. ರಾತ್ರಿಯೂ ಖಾಲಿ ಖಾಲಿ .. :) :) 

|| ಪ್ರಶಾಂತ್ ಖಟಾವಕರ್ ||

Friday 2 March 2012

ನಾನೊಬ್ಬ ರೈತ !!


ನಾನೊಬ್ಬ ರೈತ
****************
ಕುಬೇರನಾಗುವ ಕನಸು ಕಾಣುವ ಸಾಮಾನ್ಯನು..  ನಾನೊಬ್ಬ ರೈತ !!

ಮಿಂಚೊಂದು ಹಾರುತಲತ್ತಿತ್ತ ಸುತ್ತ ಮುತ್ತ
ಎತ್ತ ನೋಡಿದರತ್ತ ಆಗಸದೊಳು ಬೆಳಗುತ್ತ
ಎನ್ನ ಮನಸಿನಾಳದೊಳು ಅದೇನೋ ಚಿಂತಿಸುತ
ಎಚ್ಚರಿಸುತಿಹುದು ಕಟ್ಟಲೆತ್ತುಗಳ ನೇಗಿಲ ಹಿಡಿಯುತ

ಕುಬೇರನಾಗುವ ಕನಸು ಕಾಣುವ ಸಾಮಾನ್ಯನು..  ನಾನೊಬ್ಬ ರೈತ !! 

ಕಗ್ಗತ್ತಲು ಕಳೆದು ಮೂಡುತಿಹನೇಸರನಾಗಸದೊಳು
ಕಪ್ಪು ಬಿಳುಪಿನಾಟದಿಂದೆನ್ನಮನಸ್ಸಿನಾಲೋಚನೆಗಳು
ಕನಸಿನಾಳದಿಂದಾಚೆಗೆಳೆದು ತಂದು ಬಣ್ಣದ ಬದುಕಿನೊಳು
ಕಷ್ಟ ಸುಖದಿಂದ ಕ್ಷಣ ಕ್ಷಣ ಕರಗಿ ಕೊರಗುವ ನಾ ಜೀತದಾಳು

ಕುಬೇರನಾಗುವ ಕನಸು ಕಾಣುವ ಸಾಮಾನ್ಯನು..  ನಾನೊಬ್ಬ ರೈತ !!

ಹಾಡುತ ನಲಿಯುತ ಹಗಲಲ್ಲಿ ಹೊಲದೊಳು ದುಡಿಯುತ
ಹಾರುತ ಮುಳುಗೇಳುತ ತೇಲುತ ಕೆರೆಯಲ್ಲೀಜಾಡುತ
ಹಾದಿ ಬೀದಿಯೊಳಗಾಡುತ ಹೋಗುವೆನೆನ್ನ ಹಟ್ಟಿಯತ್ತ
ಹಾಲನ್ನು ಕರೆದು ಊರಲ್ಲಿ ಮಾರಿ ಬಂದ ಹಣವನೆಣಿಸುತ

ಕುಬೇರನಾಗುವ ಕನಸು ಕಾಣುವ ಸಾಮಾನ್ಯನು..  ನಾನೊಬ್ಬ ರೈತ !!

|| ಪ್ರಶಾಂತ್ ಖಟಾವಕರ್ ||