Friday 2 March 2012

ನಾನೊಬ್ಬ ರೈತ !!


ನಾನೊಬ್ಬ ರೈತ
****************
ಕುಬೇರನಾಗುವ ಕನಸು ಕಾಣುವ ಸಾಮಾನ್ಯನು..  ನಾನೊಬ್ಬ ರೈತ !!

ಮಿಂಚೊಂದು ಹಾರುತಲತ್ತಿತ್ತ ಸುತ್ತ ಮುತ್ತ
ಎತ್ತ ನೋಡಿದರತ್ತ ಆಗಸದೊಳು ಬೆಳಗುತ್ತ
ಎನ್ನ ಮನಸಿನಾಳದೊಳು ಅದೇನೋ ಚಿಂತಿಸುತ
ಎಚ್ಚರಿಸುತಿಹುದು ಕಟ್ಟಲೆತ್ತುಗಳ ನೇಗಿಲ ಹಿಡಿಯುತ

ಕುಬೇರನಾಗುವ ಕನಸು ಕಾಣುವ ಸಾಮಾನ್ಯನು..  ನಾನೊಬ್ಬ ರೈತ !! 

ಕಗ್ಗತ್ತಲು ಕಳೆದು ಮೂಡುತಿಹನೇಸರನಾಗಸದೊಳು
ಕಪ್ಪು ಬಿಳುಪಿನಾಟದಿಂದೆನ್ನಮನಸ್ಸಿನಾಲೋಚನೆಗಳು
ಕನಸಿನಾಳದಿಂದಾಚೆಗೆಳೆದು ತಂದು ಬಣ್ಣದ ಬದುಕಿನೊಳು
ಕಷ್ಟ ಸುಖದಿಂದ ಕ್ಷಣ ಕ್ಷಣ ಕರಗಿ ಕೊರಗುವ ನಾ ಜೀತದಾಳು

ಕುಬೇರನಾಗುವ ಕನಸು ಕಾಣುವ ಸಾಮಾನ್ಯನು..  ನಾನೊಬ್ಬ ರೈತ !!

ಹಾಡುತ ನಲಿಯುತ ಹಗಲಲ್ಲಿ ಹೊಲದೊಳು ದುಡಿಯುತ
ಹಾರುತ ಮುಳುಗೇಳುತ ತೇಲುತ ಕೆರೆಯಲ್ಲೀಜಾಡುತ
ಹಾದಿ ಬೀದಿಯೊಳಗಾಡುತ ಹೋಗುವೆನೆನ್ನ ಹಟ್ಟಿಯತ್ತ
ಹಾಲನ್ನು ಕರೆದು ಊರಲ್ಲಿ ಮಾರಿ ಬಂದ ಹಣವನೆಣಿಸುತ

ಕುಬೇರನಾಗುವ ಕನಸು ಕಾಣುವ ಸಾಮಾನ್ಯನು..  ನಾನೊಬ್ಬ ರೈತ !!

|| ಪ್ರಶಾಂತ್ ಖಟಾವಕರ್ ||


3 comments:

  1. ಕೃಷಿ ನೆಚ್ಚಿ ಭೂ ತಾಯಿಯ ಸೇವಿಸುವ ಹಲವಾರು ಕುಟುಂಬಗಳು ಕುಬೇರರಾಗಿದ್ದಾರೆ. ನಮ್ಮ ಹಳ್ಳಿಗಾಡಿನ ತುಂಡು ಗುತ್ತಿಗೆ ರೈತರು ಬಡತನದ ಮದ್ಯೆಯೂ ಹೃದಯ ಶ್ರೀಮಂತರು.

    ಇದು ನಿಮ್ಮ ಉತ್ಕೃಷ್ಟ ಕಾವ್ಯ ರಚನೆ.

    ಕೃಷ್ಣದೇವರಾಯರ ಪಾತ್ರದಾರಿ ಮಗುವಿನ ಚಿತ್ರ ಮನಮೆಚ್ಚಿತು. ಅಂದಹಾಗೆ ಯಾರೀ ಮಗು?

    ReplyDelete
    Replies
    1. ತುಂಬಾ ತುಂಬಾ ಧನ್ಯವಾದಗಳು ಸರ್.. & ಅದು ನಾವೇ.. ಶ್ರೀ ಕೃಷ್ಣದೇವರಾಯ .. :)
      (ಈ ಚಿತ್ರಕ್ಕೆ ಒಂದು ಕವನ ಬರೆಯುತ್ತೇವೆ) .. ಎಲ್ಲಾ ನೆನಪುಗಳನ್ನು ಒಂದುಗೂಡಿಸಿ .. ನಿಮ್ಮ ಪ್ರೋತ್ಸಾಹದ ನುಡಿಗಳಿಗೆ ಮತ್ತೊಮ್ಮೆ ಹೃತ್ಪೂರ್ವಕ ವಂದನೆಗಳು.. ಸರ್.. :)

      Delete
  2. ನಿಮ್ಮ ಕಥೆ ಕವನಗಳು ಹೀಗೆ ಸಾಗಿ ಜನರ ಮನಸ್ಸು ಮುಟ್ಟಲಿ

    ReplyDelete